ಅಭಿಮಾನದ ಅನಾವರಣ
ಅಭಿಮಾನ ಎನ್ನುವುದು ಬಹು ದೊಡ್ಡ ಪದ. ಪ್ರತಿಯೊಬ್ಬರೂ ಒಂದಿಲ್ಲೊಂದು ರೀತಿಯಲ್ಲಿ ಈ ಭಾವನೆಯ ಅಳತೆಯಲ್ಲಿ ತೂಗುತ್ತಿರುವವರೇ.
“ಆ ಆಟಗಾರ ನನಗೆ ಇಷ್ಟ”, “ಈ ನಟನ ಅಭಿನಯ ನನಗೆ ಪಂಚಪ್ರಾಣ”, “ಆ ಗಾಯಕನ ಗಾನಲಹರಿಗೆ ನಾನು ಮೂಕವಿಸ್ಮಿತ”-ಹೀಗೆ, ಅಭಿಮಾನ ಎಂಬ ಅಪರಿಮಿತ ಪ್ರೀತಿ ಮತ್ತು ವಿಶ್ವಾಸವು ಜೀವನದ ಹಲವಾರು ಮಜಲುಗಳಲ್ಲಿ ನಮ್ಮನ್ನು ಹಾದು ಹೋಗಿರುತ್ತದೆ. ಇದು ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲರ ಮನದಲ್ಲೂ ಒಂದಿಲ್ಲೊಂದು ರೂಪದಲ್ಲಿ ಇರುತ್ತದೆ. ಕೆಲವರು ತೋರ್ಪಡಿಸುತ್ತಾರೆ, ಇನ್ನೂ ಕೆಲವರು ಖುಷಿಪಟ್ಟು ಸುಮ್ಮನಾಗುತ್ತಾರೆ.
ಅಭಿಮಾನ ಒಳ್ಳೆಯದು. ಆದರೆ ಅದು ಅತಿಯಾದರೆ ಅನಾಹುತ ಎದುರಾಗಬಹುದು. ಅತಿಯಾದರೆ ಅಮೃತವೂ ವಿಷ ಆಗತ್ತೆ ಅಂದ ಮೇಲೆ ಅಭಿಮಾನ ಅನಾಹುತವಾಗದೇ ಇದ್ದೀತೆ? ಅತಿರೇಕದ ಅಭಿಮಾನ ಕ್ಷಣಿಕ ಸಂತೋಷವನ್ನು ತರಬಹುದು, ಆದರೆ ಅದರಿಂದ ನಮಗೆ ಬರುವುದೇನೂ ಇಲ್ಲ. ತಮ್ಮ ನೆಚ್ಚಿನ ತಾರೆಯರ ಜೀವನ ನಿಜಕ್ಕೂ ಮಾದರಿಯಾಗಿದ್ದರೆ, ಅದರಲ್ಲಿನ ಉತ್ತಮತೆಯನ್ನು ಅಳವಡಿಸಿಕೊಂಡರೆ ಅದೂ ಸಹ ಅಭಿಮಾನದ ಶ್ರೇಷ್ಟ ರೂಪ. ಆದರೆ ಅವರು ಮಾಡುವ ಎಲ್ಲವನ್ನೂ ಅಕ್ಷರಶ: ಅನುಸರಿಸಲು ಯತ್ನಿಸಿದರೆ, ಅದು ಅಪಾಯಕಾರಿ ಆಗಬಹುದು. ಅಭಿಮಾನ ಮನದೊಳಗಿನ ಭಾವನೆವರೆಗೆ ಸೀಮಿತವಾಗಿದ್ದರೆ ಒಳಿತು. ಅದೇ ಭಾವನೆ ಬೀದಿಗೆ ಬಂದರೆ ಜನಜೀವನ ಅಸ್ಥವ್ಯಸ್ತ ಆಗುವುದು ಖಂಡಿತ. ಇದಕ್ಕೆ ಸಾಕ್ಷಿ ಇತ್ತೀಚಿನ ಉದ್ಯಾನ ನಗರಿಯ ಕಾಲ್ತುಳಿತ ಪರಕರಣ.
ಹೌದು, ನಾವೆಲ್ಲರೂ ೧೮ ವರ್ಷಗಳಿಂದ ಕಾದಿದ್ದ ಗೆಲುವು ನಮ್ಮದಾಯಿತು. ಅದರ ಸಂಭ್ರಮ, ಸಡಗರ ಎಲ್ಲೆಡೆ ರಾರಾಜಿಸಿತು. ಬೆವರು ಸುರಿಸಿ ಆಡಿದ ಆಟಗಾರರ ಪರಿಶ್ರಮ, ಜೊತೆಯಾಗಿ ನಿಂತು ಗೆಲುವನ್ನು ಸಂಭ್ರಮಿಸಿದ ಅಭಿಮಾನಿ ಸಮೂಹ, ಪಟಾಕಿ, ಸಿಹಿ ಹಂಚಿಕೆ-ಇವೆಲ್ಲರೂ ನೋಡಲು ತಂಪು ಮನಸ್ಸಿಗೆ ಹಿತ. ಆದರೆ ಈ ಸಂಭ್ರಮದ ಮುಂದುವರಿದ ಭಾಗವಾಗಿ, ನೆಚ್ಚಿನ ಆಟಗಾರರನ್ನು ನೋಡುವ ಕಾತುರದಿಂದ ಹರಿದುಬಂದ ಜನಸಾಗರಲ್ಲಿ ಮುಳುಗಿದ ಅದೆಷ್ಟೋ ಅಭಿಮಾನಿ ಬಳಗ ಎದ್ದೇಳಲೇ ಇಲ್ಲ ಅನ್ನುವುದು ದುರಂತ ಹಾಗೂ ದುರದೃಷ್ಟಕರ.
ಇದು ಅಭಿಮಾನಿಗಳ ಆತುರವೋ? ಸರ್ಕಾರದ ಭದ್ರತಾ ವ್ಯವಸ್ಥೆಯ ವೈಫಲ್ಯವೋ? ಪೋಲೀಸರ ಅಸಹಾಯಕತೆಯೋ? ಗೆದ್ದ ತಂಡದ ಹುಮ್ಮಸ್ಸೋ? ವೈಫಲ್ಯ ಯಾರದ್ದಾದರೂ ಇರಬಹುದು ಆದರೆ ಬಲಿಯಾಗಿದ್ದು ಮಾತ್ರ ಬಾಳಿ ಬದುಕಬೇಕಾದ ಮುಗ್ದ ಜೀವಗಳು. ಕಳೆದುಕೊಂಡಿದ್ದು ಕಷ್ಟಪಟ್ಟು ಕನಸಿನ ಅರಮನೆಯನ್ನೇ ಕಟ್ಟಿಕಂಡು ಬೆಳೆಸಿದ ತಂದೆ ತಾಯಿ. ಆ ಅಭಿಮಾನದ ಸಾಗರದಿಂದ ಹರಿದುಬಂದಿದ್ದು ಬರೀ ದು:ಖ, ಆರ್ತನಾದ, ಈ ಸಲ ಕಪ್ ನಮ್ದೇ ಅನ್ನುವ ಸಡಗರಕ್ಕೆ ಕಪ್ಪು ಚುಕ್ಕೆ ಅಷ್ಟೇ.
ಅಭಿಮಾನಿಗಳು ಇದನ್ನೆಲ್ಲಾ ನೋಡಿಯಾದರೂ ಅರಿತುಕೊಳ್ಳಬೇಕು. ಮನೆಯಲ್ಲೇ ಕುಣಿದು ಕುಪ್ಪಳಿಸಿದರೂ ಅದು ಕೂಡ ಅಭಿಮಾನವೇ, ಟೀವಿಯಲ್ಲಿ ನೋಡಿ ಸಂಭ್ರಮಿಸಿದರೂ ಅಭಿಮಾನವೇ. ಎಲ್ಲೋ ಹೋಗಿ ದೂರದಿಂದ ತಾರೆಯರನ್ನು ಕಂಡೂ ಕಾಣದಂತೆ ನೋಡಿದರೆ ಮಾತ್ರ ಅಭಿಮಾನದ ಅನಾವರಣವಲ್ಲ, ಟೀವಿಯಲ್ಲಿ ನೋಡಿ ಆನಂದಿಸರೆ ಕೂಡ ಅದು ಅಭಿಮಾನವೇ.
ಕ್ಷಣಿಕ ಆನಂದಕ್ಕಾಗಿ, ಒಂದು ಸೆಲ್ಫಿ, ದೂರದಿಂದ ನೋಡಿದೆ ಅನ್ನುವ ಸಾಮಾಜಿಕ ಮಾದ್ಯಮದಲ್ಲೊಂದು ಫೋಟೋ, ಇಷ್ಟಕ್ಕಾಗಿ ಜೀವನ ಹಾಳಾಗದಿರಲಿ. ಅಭಿಮಾನಿಗಳು ಅಭಿಮಾನ ತೋರ್ಪಡಿಸುವ ರೀತಿಯನ್ನು ಬದಲಿಸಬೇಕಿದೆ. ಯುವ ಸಮೂಹ ಚಿಂತಿಸಿ ಹೆಜ್ಜೆ ಇಡಬೇಕಾದ ಸ್ಥಿತಿ ಖಂಡಿತ ಇದೆ. ಇನ್ನಾದರೂ ಅಭಿಮಾನ ಅನ್ನುವ ಪದಕ್ಕೆ ಹೊಸ ಭಾಷ್ಯ ಸಿಗಲಿ, ಕ್ರೀಡೆ ರಾಜಕೀಯವಾಗದೇ ಕ್ರೀಡಾಂಗಣದಲ್ಲೇ ಇರಲಿ. ಅಭಿಮಾನ ಮನದಲ್ಲೇ, ಮನದಂಗಳದಲ್ಲೇ ರಾರಾಜಿಸಲಿ. ಆಗ ಗೆಲುವಿನ ಸಂಭ್ರಮ ಸಡಗರಕ್ಕೊಂದು ನಿಜವಾದ ಅರ್ಥ ಸಿಗುತ್ತದೆ.
Swathi M. Sharma
Senior Producer-Digital Media and Branding
IIIT-Bangalore